ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಇಂದು (ಮೇ 12 ಮಂಗಳವಾರ) ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮಾಹಿತಿಯನ್ನು ಪ್ರಧಾನಮಂತ್ರಿಯವ ಕಛೇರಿ ಮೂಲಗಳು ಖಚಿತಪಡಿಸಿವೆ. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ(India-Pak ceasefire) ಬಳಿಕ ದೇಶವಾಸಿಗಳನ್ನುದ್ದೇಶಿಸಿ ಪ್ರಧಾನಿಯವರು ಮಾಡುತ್ತಿರುವ ಮೊದಲ ಭಾಷಣ ಇದಾಗಿದೆ. ಹೀಗಾಗಿ ಮೋದಿಯ ಈ ಭಾಷಣ ಭಾರೀ ಕುತೂಹಲ ಕೆರಳಿದೆ. ಸಭೆಯಲ್ಲಿ ‘ಆಪರೇಷನ್ ಸಿಂದೂರ’ ಕಾರ್ಯಚರಣೆ ಮತ್ತು ಕದನ ವಿರಾಮದ ಬಗ್ಗೆ ಮಹತ್ವದ ಮಾಹಿತಿ ನೀಡುವ ಸಾಧ್ಯತೆ ಇದೆ.
ಭಾರತವು ಪಾಕಿಸ್ತಾನದೊಂದಿಗಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದರಿಂದ ಅನೇಕ ಭಾರತೀಯರಲ್ಲಿ, ವಿಶೇಷವಾಗಿ ವ್ಯೂಹಾತ್ಮಕ ಮತ್ತು ರಾಷ್ಟ್ರೀಯವಾದಿ ವಲಯಗಳಲ್ಲಿ ನಿರಾಶೆಯ ಭಾವ ಮೂಡಿದೆ. ಏಕೆ ಕದನವಿರಾಮಕ್ಕೆ ಒಪ್ಪಿಕೊಳ್ಳಲಾಯಿತು? ಯುದ್ಧ ಮುಂದುವರೆಸಿ ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ)ಯನ್ನೂ ಯಾಕೆ ವಶಪಡಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದೆಲ್ಲದಕ್ಕೂ ಇಂದು ಮೋದಿ ತಮ್ಮ ಭಾಷಣದಲ್ಲಿ ಉತ್ತರಿಸುವ ನಿರೀಕ್ಷೆ ಇದೆ.
ಭಾನುವಾರ ಸೇನೆ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ ಅವರು, ‘ಅವರು (ಪಾಕಿಗಳು) ಗುಂಡು ಹಾರಿಸಿದರೆ, ನೀವು ಬಾಂಬ್ನಿಂದ ಉತ್ತರಿಸಿ’ ಎಂದು ಸಶಸ್ತ್ರ ಪಡೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು.
ಪಾಕಿಸ್ತಾನವು ಇನ್ನು ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಬೆದರಿಕೆ ಹಾಕಿ ಇಲ್ಲಿ ಉಗ್ರವಾದಕ್ಕೆ ಮುಂದಾಗಬಹುದು. ಇದಕ್ಕೆ ನಾವು ವಜ್ರಮುಷ್ಟಿಯಿಂದ ಉತ್ತರ ಕೊಡುತ್ತೇವೆ. ಅಣುಬಾಂಬ್ ದಾಳಿಯ ಬೆದರಿಕೆ ಇನ್ನೆಂದೂ ಪಾಕಿಸ್ತಾನವನ್ನು ಕಾಪಾಡಲ್ಲ. ಪಾಕಿಸ್ತಾನ ಗುಂಡಿನ ದಾಳಿ ನಡೆಸಿದರೆ ನೀವು ಬಾಂಬ್ನಿಂದ ಉತ್ತರ ನೀಡಬೇಕು. ಅವರ ಪ್ರತಿ ದಾಳಿಗೂ ದುಪ್ಪಟ್ಟು ದಾಳಿ ನಡೆಸಬೇಕು; ಎಲ್ಲೇ ಅಡಗಿ ಕುಳಿತರೂ ಉಗ್ರರನ್ನು ಹೊಡೆದು ಹಾಕಲಾಗುವುದು. ಈಗಾಗಲೇ ಆಪರೇಶನ್ ಸಿಂದೂರದ ಮೂಲಕ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಸಶಸ್ತ್ರ ಪಡೆಗಳಿಗೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.