ಬೆಂಗಳೂರು: 2023ರಲ್ಲಿ ತೆರೆಕಂಡ ‘ಆರ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ, ನಿರ್ದೇಶಕ, ಬರಹಗಾರ ರೋಹಿತ್ ಹಳೇ ಅನುಭವದ ಜತೆಗೆ ಹೊಸ ಕನಸನ್ನು ಹೊತ್ತು ಎರಡನೇ ಚಿತ್ರವನ್ನ ಅನೌನ್ಸ್ ಮಾಡಿದ್ದು, ‘ಸಹ್ಯಾದ್ರಿ’ ಅಂತ ಹೆಸರಿಟ್ಟಿದ್ದಾರೆ. ದೈವ ಹಾಗೂ ದುಷ್ಟ ಶಕ್ತಿಯ ನಡುವಿನ ಸಂಘರ್ಷವನ್ನ ಆಧರಿಸಿ ʼಆರʼ ಮಾಡಿದ್ದ ರೋಹಿತ್ ಈ ಬಾರಿ, ಇನ್ನೊಂದು ಕೌತುಕ ವಿಚಾರವನ್ನ ಹೇಳಲು ಹೊರಟ್ಟಿದ್ದಾರೆ.
ʼಸಹ್ಯಾದ್ರಿʼ ಪಂಚ ಭಾಷೆಯಲ್ಲಿ ಬರಲಿದ್ದು, ಟೈಟಲ್ ಟೀಸರ್ ಮೂಲಕ ಇದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದನ್ನು ಸೂಚಿಸಿದ್ದಾರೆ. ಹೌದು, ʼಸಹ್ಯಾದ್ರಿʼ ಚಿತ್ರದ ಕಥಾ ಹಂದರ ಆಧ್ಯಾತ್ಮಿಕ ದರೋಡೆಕೋರ ಪ್ರಕಾರವಾಗಿದ್ದು, ಮೆದುಳಿನಲ್ಲಿ ಹೆಚ್ಚಿನ ನರಕೋಶಗಳನ್ನು ಹೊಂದಿರುವ ಅಕಾಲಿಕ ಮಗು ವಯಸ್ಸಾದಂತೆ, ಎಲ್ಲ ಶಕ್ತಿಯನ್ನು ತಡೆಹಿಡಿಯುವ ವಿಜಯಶಾಲಿಯಾಗುತ್ತದೆ. ಈ ಲೈನ್ ಇಟ್ಟುಕೊಂಡು ಈ ಸಲ ರೋಹಿತ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ʼಆರʼ ಚಿತ್ರದ ಮೂಲಕ ಸಿನಿಮಾದ ವ್ಯಾಪಾರ ವ್ಯವಹಾರವನ್ನ ಸಂಪೂರ್ಣವಾಗಿ ಅರಿತುಕೊಂಡಿರುವ ರೋಹಿತ್ ಮತ್ತು ತಂಡ 2 ವರ್ಷಗಳಿಂದ ಎರಡನೇ ಸಿನಿಮಾ ಯೋಜನೆಯನ್ನ ಅಚ್ಚುಕಟ್ಟಾಗಿ ರೂಪಿಸಿದ್ದು, ಈ ಬಾರಿ ಗೆದ್ದೇ ಗೆಲ್ಲುವ ದೊಡ್ಡದಾಗಿ ನಿಲ್ಲುವ ಛಲದಲ್ಲಿ ಸಹ್ಯಾದ್ರಿಯನ್ನ ರೂಪಿಸುವ ಪ್ರಯತ್ನ ಮಾಡ್ತಿದೆ. ಮೊದಲಿಗೆ ʼಸಹ್ಯಾದ್ರಿʼ ಚಿತ್ರವನ್ನು ಕನ್ನಡದಲ್ಲಿ ಚಿತ್ರಿಸಿ ನಂತರ ಇತರ ಭಾಷೆಗಳಿಗೆ ಡಬ್ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.
ಸದ್ಯಕ್ಕೆ ವಿಭಿನ್ನವಾಗಿ ಅಪ್ಪಟ ಕನ್ನಡದ ಸೊಗಡಲ್ಲಿ, ಸಹ್ಯಾದ್ರಿಯ ತಪ್ಪಲಲ್ಲಿ ನಿಂತು ಶೀರ್ಷಕೆ ಅನಾವರಣ ಮಾಡಿರುವ ಆರ ರೋಹಿತ್, ಸದ್ಯದಲ್ಲೇ ಚಿತ್ರದ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸುವ ಕೆಲಸದಲ್ಲಿದ್ದಾರೆ. ಮಂಗಳೂರು ಸೇರಿದಂತೆ ಬಹುತೇಕ ಪಶ್ಚಿಮ ಘಟ್ಟಗಳಲ್ಲೇ ʼಸಹ್ಯಾದ್ರಿʼ ಚಿತ್ರದ ಚಿತ್ರೀಕರಣ ನಡೆಯಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಈ ʼಸಹ್ಯಾದ್ರಿʼ 2026ರ ಜುಲೈನಲ್ಲಿ ತೆರೆಗೆ ಬರಲಿದೆ.
ಎಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ರೇಣುಕಾ ಪಿ.ಎನ್. ʼಸಹ್ಯಾದ್ರಿʼ ಅನ್ನು ನಿರ್ಮಿಸುತ್ತಿದ್ದಾರೆ. ರೋಹಿತ್ ಈ ಚಿತ್ರದ ಕಥೆ ಬರೆದು, ನಿರ್ದೇಶಿಸಿ, ನಟಿಸುತ್ತಿದ್ದಾರೆ. ವಿಲಿಯಲ್ ಡೇವಿಡ್ ಸಹಾಯಕ ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಹಾಯಕ ನವನಾಥ್ ವಾಸುದೇವ್ ಸಂಗೀತ ಸಂಯೋಸಲಿದ್ದಾರೆ.
ತಾಂತ್ರಿಕವಾಗಿ ನಿಪುಣರ ತಂಡ ಕಟ್ಟಿಕೊಂಡಿರುವ ರೋಹಿತ್ ಪ್ರಸ್ತುತ ಉದ್ಯಮದ ಸ್ಥಿಗತಿಯನ್ನ ಅಧ್ಯಾಯನ ಮಾಡಿ ʼಸಹ್ಯಾದ್ರಿʼ ಚಿತ್ರವನ್ನು ಮಾಡೋದಕ್ಕೆ ಕೈ ಹಾಕಿದ್ದು, ಈ ತಂಡದ ನಡೆ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.