ಬೆಂಗಳೂರು:
ಪತಿಯ ಹತ್ಯೆ ಮಾಡಿ, ಹೃದಯಾಘಾತ ಎಂದು ಸುಳ್ಳಿನ ಕಥೆ ಕಟ್ಟಿದ್ದ ಮಹಿಳೆಯನ್ನು ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.ಭವಾನಿ ನಗರದ ನಿವಾಸಿ ಭಾಸ್ಕರ್ (41) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಶೃತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಭಾಸ್ಕರ್ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ.ಭಾಸ್ಕರ್ ಮೇಲೆ ಹಲ್ಲೆ ನಡೆದು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ಇದರ ಬೆನ್ನಲ್ಲೇ ಶಂಕೆ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಹನ್ನೆರಡು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶೃತಿ ಜೊತೆ ಖಾಸಗಿ ಉದ್ಯೋಗಿ ಭಾಸ್ಕರ್ ಎರಡನೇ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಮೃತ ಭಾಸ್ಕರ್ ಸ್ತ್ರೀಲೋಲನಾಗಿದ್ದು, ಮಹಿಳೆಯರ ಜತೆ ಸ್ನೇಹ ಮಾಡಿ ಮೋಜು ಮಸ್ತಿ ಮಾಡುವುದು ಆತನ ಖಯಾಲಿ ಆಗಿತ್ತು. ಇತ್ತ ಮನೆ ಕಡೆ ಆತ ಲಕ್ಷವಿರಲಿಲ್ಲ. ವಾರಕ್ಕೆರಡು ಮೂರು ದಿನಗಳು ಆತ ಮನೆ ಕಡೆ ಸುಳಿಯುತ್ತಿರಲಿಲ್ಲ. ತನ್ನ ಮಕ್ಕಳ ಬಗ್ಗೆ ಆತನಿಗೆ ಕಾಳಜಿ ಇರಲಿಲ್ಲ. ಹೀಗಾಗಿ ತನ್ನ ಪತಿಯ ಉಡಾಫೆ ವರ್ತನೆಗೆ ಶೃತಿ ಬೇಸರಗೊಂಡಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಮನೆ ಕೆಲಸದ ಮಹಿಳೆ ಜೊತೆಗೂ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆಕೆಗೆ ಅನುಮಾನವಿತ್ತು. ಭಾಸ್ಕರ್ ಆದಾಯ ಉತ್ತಮವಾಗಿತ್ತು. ವೇತನವಲ್ಲದೆ ಮನೆ ಬಾಡಿಗೆಗಳಿಂದಲೇ ತಿಂಗಳಿಗೆ 1.15 ಲಕ್ಷ ಗಳಿಸುತ್ತಿದ್ದ. ಅದರಲ್ಲಿ ಹೆಚ್ಚಿನ ಹಣವನ್ನು ಮನೆ ಕೆಲಸದಾಳಿಗೇ ಖರ್ಚು ಮಾಡಿದ್ದ ಎನ್ನಲಾಗಿದೆ.