ಬೆಂಗಳೂರು, ಜ.20, 2025: ಬೆಂಗಳೂರು ನಗರದ ಎಂ.ಕೆ. ಜಯಮ್ಮ ಮತ್ತು ಬಿ.ಎಸ್.ಆರ್. ಶಾಸ್ತ್ರಿ ಟ್ರಸ್ಟ್ನ 14ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ಇಲ್ಲಿನ (Bengaluru News) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಗದಗ ಮತ್ತು ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಮತ್ತು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಧಾರ್ಮಿ ಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜರುಗಿದವು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಆಟೊಮೇಷನ್ನ ನಿವೃತ್ತ ಪ್ರಾಧ್ಯಾಪಕ ಡಾ. ವೈ. ನರಹರಿ, ಖ್ಯಾತ ಕ್ಯಾನ್ಸರ್ತಜ್ಞರು, ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಬಿ.ಎಸ್. ಶ್ರೀನಾಥ್, ಖ್ಯಾತ ಶಿಕ್ಷಣ ತಜ್ಞ ಡಾ. ಎಚ್.ಎಸ್. ನಾಗರಾಜ್ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಖ್ಯಾತ ಕೊಳಲು ವಾದಕ ವಿದ್ವಾನ್ ಎಚ್.ಎಸ್. ವೇಣುಗೋಪಾಲ್, ಖ್ಯಾತ ಹೃದ್ರೋಗ ತಜ್ಞ ಮತ್ತು ಜಯದೇವ ಹೃದಯರಕ್ತನಾಳ ಸಂಸ್ಥೆಯ ಪ್ರಾಧ್ಯಾಪಕ ಡಾ. ಎಲ್. ಶ್ರೀಧರ್, ಖ್ಯಾತ ನೇತ್ರಶಾಸ್ತ್ರಜ್ಞ ಡಾ. ಬಿ.ಎಸ್. ಮುರಳೀಧರ ಕೃಷ್ಣ, ಬೆಂಗಳೂರು ವಿಠಲ ಕಣ್ಣಿನ ಆರೈಕೆ ಆಸ್ಪತ್ರೆಯ ಹಿರಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಕ ಡಾ. ಬಿ.ಎಸ್. ಸಿಂಧು ಅವರನ್ನು ಸನ್ಮಾನಿಸಲಾಯಿತು. ಅಸಾಧಾರಣ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಚೆನ್ನೈ ಗಣಿತ ಸೊಸೈಟಿಯ ವಿದ್ಯಾರ್ಥಿ ಚಿನ್ಮಯ್ ಪ್ರವೀಣ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದ 1,267 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್ ಟೇಬಲ್
ಸಮಾಜ ಸೇವೆಯಲ್ಲಿ ತೊಡಗಿರುವ ವಿವಿಧ ಟ್ರಸ್ಟ್ ಮತ್ತು ಸಂಸ್ಥೆಗಳಿಗೆ ಎಂ.ಕೆ. ಜಯಮ್ಮ ಮತ್ತು ಬಿ.ಎಸ್.ಆರ್. ಶಾಸ್ತ್ರಿ ಟ್ರಸ್ಟ್ನ ವತಿಯಿಂದ ಈ ಸಂದರ್ಭದಲ್ಲಿ ದೇಣಿಗೆ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು, ಮಧುಮೇಹ ರೋಗಿಗಳಿಗೆ, ಬಾಲಾಪರಾಧಿಗಳು ಮತ್ತು ಹಿರಿಯರಿಗೆ ಚಿಕಿತ್ಸೆ ನೀಡಲು ಆರ್ಥಿಕ ಸಹಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಟ್ರಸ್ಟಿಗಳಾದ ಬಿ.ಆರ್.ರವಿ ಮತ್ತು ಬಿ.ಆರ್. ನಾಗರಾಜ್ ಅವರ ಸೇವೆಯನ್ನು ಶ್ಲಾಘಿಸಿದರು. ಶಂಕರ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.