ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಂಡ ರೈಲ್ವೇಸ್(Delhi vs Railways) ಮತ್ತು ದೆಹಲಿ ನಡುವಣ ರಣಜಿ ಪಂದ್ಯದಲ್ಲಿ ಅಭಿಮಾನಿಯೊಬ್ಬ ಭದ್ರತಾ ಕೋಟೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ(Virat Kohli) ಪಾದಕ್ಕೆ ಬಿದ್ದು ನಮಸ್ಕರಿಸಿದ ಘಟನೆ ನಡೆಯಿತು.
12 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್ ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ ದೆಹಲಿ ಪರ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಕರೆದೊಯ್ದರು. ಇದೇ ವೇಳೆ ಕೊಹ್ಲಿ ಭದ್ರತಾ ಸಿಬ್ಬಂದಿಗಳ ಜತೆ ಆತನಿಗೆ ಏನೂ ಮಾಡದಂತೆ ಮನವಿ ಮಾಡಿಕೊಂಡರು.
‘ಡಿ’ ಗುಂಪಿನಲ್ಲಿರುವ ದೆಹಲಿ ತಂಡ ಕ್ವಾರ್ಟರ್ ಫೈನಲ್ ರೇಸ್ನಿಂದ ಬಹುತೇಕ ಹೊರಬಿದ್ದಿದ್ದರೂ, ಕೊಹ್ಲಿ ಆಡಲಿದ್ದಾರೆ ಎನ್ನುವ ಕಾರಣಕ್ಕೆ ಈ ಪಂದ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಕೊಹ್ಲಿ ಆಡುವ ಕಾರಣದಿಂದಲೇ ದಿಲ್ಲಿ ಕ್ರಿಕೆಟ್ ಸಂಸ್ಥೆ 10 ಸಾವಿರ ಉಚಿತ ಟಿಕೆಟ್ ಹಂಚಿದೆ. ಪಂದ್ಯಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಮಾಡಲಾಗಿದೆ. ತಾವೊಬ್ಬ ‘ಸೂಪರ್ ಸ್ಟಾರ್’ ಎನ್ನುವ ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೂ ಬೆರೆತು ಕೊಹ್ಲಿ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಯುವ ಆಟಗಾರರಿಗೆ ಕೆಲ ಸಲಹೆಯನ್ನು ನೀಡಿದ್ದಾರೆ.
ಸದ್ಯ ಮೊದಲು ಬ್ಯಾಟಿಂಗ್ ನಡೆಸುತ್ತಿರುವ ರೈಲ್ವೇಸ್ ತಂಡ 50 ರನ್ ದಾಟುವ ಮುನ್ನವೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ತಂಡಗಳು
ದೆಹಲಿ: ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ವಿರಾಟ್ ಕೊಹ್ಲಿ, ಯಶ್ ಧುಲ್, ಆಯುಷ್ ಬದೋನಿ (ನಾಯಕ), ಪ್ರಣವ್ ರಾಜುವಂಶಿ (ವೀ.ಕಿ), ಸುಮಿತ್ ಮಾಥುರ್, ಶಿವಂ ಶರ್ಮಾ, ನವದೀಪ್ ಸೈನಿ, ಮನಿ ಗ್ರೆವಾಲ್, ಸಿದ್ಧಾಂತ್ ಶರ್ಮಾ.
ರೈಲ್ವೇಸ್: ಅಂಚಿತ್ ಯಾದವ್, ವಿವೇಕ್ ಸಿಂಗ್, ಸೂರಜ್ ಅಹುಜಾ (ನಾಯಕ), ಉಪೇಂದ್ರ ಯಾದವ್ (ವೀ.ಕಿ), ಮೊಹಮ್ಮದ್ ಸೈಫ್, ಭಾರ್ಗವ್ ಮೆರೈ, ಕರ್ಣ್ ಶರ್ಮಾ, ರಾಹುಲ್ ಶರ್ಮಾ, ಹಿಮಾಂಶು ಸಾಂಗ್ವಾನ್, ಅಯಾನ್ ಚೌಧರಿ, ಕುನಾಲ್ ಯಾದವ್