ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ (Waqf Amendment Bill) ಬಗ್ಗೆ ಪಾಕಿಸ್ತಾನದ ಟೀಕೆಯನ್ನು ಭಾರತ ಮಂಗಳವಾರ ಬಲವಾಗಿ ತಿರಸ್ಕರಿಸಿದೆ. ಭಾರತದ ಆಂತರಿಕ ವಿಷಯದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಹಕ್ಕು ಇಲ್ಲ ಮತ್ತು ಇತರರಿಗೆ ಉಪದೇಶ ಮಾಡುವ ಬದಲು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ಕಾನೂನಿನ ಕುರಿತು ಪಾಕಿಸ್ತಾನದ ಹೇಳಿಕೆಗಳನ್ನು “ಪ್ರೇರೇಪಿತ ಮತ್ತು ಆಧಾರರಹಿತ” ಎಂದು ಬಣ್ಣಿಸಿದ್ದು, ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನೆರೆಯ ದೇಶಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್ ಅಲಿ ಖಾನ್ ಅವರು ಗುರುವಾರ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2025 ಅನ್ನು “ಮಸೀದಿಗಳು ಮತ್ತು ದೇವಾಲಯಗಳು ಸೇರಿದಂತೆ ಮುಸ್ಲಿಮರನ್ನು ಅವರ ಆಸ್ತಿಗಳಿಂದ ಹೊರಹಾಕುವ ಕಾಯ್ದೆ” ಎಂದು ಹೇಳಿದ್ದರು. ಇದು ಭಾರತೀಯ ಮುಸ್ಲಿಮರ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳ ಮೇಲಿನ ಉಲ್ಲಂಘನೆಯಾಗಿದೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಹೇಳಿದ್ದರು. ವಕ್ಫ್ ಕಾನೂನನ್ನು ಪಾಕಿಸ್ತಾನಿ ಮಾಧ್ಯಮ ಮತ್ತು ರಾಜಕೀಯ ವಲಯಗಳಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ.
ಅದಕ್ಕೆ ಪ್ರತಿಯಾಗಿ ಭಾರತೀಯ ವಿದೇಶಾಂಗ ಕಚೇರಿಯ ವಕ್ತಾರ ರಣಧೀರ್ ಜೈಸ್ವಾಲ್ ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ “ಪಾಕಿಸ್ತಾನವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ವಿಷಯಕ್ಕೆ ಬಂದಾಗ ಇತರರಿಗೆ ಉಪದೇಶ ಮಾಡುವ ಬದಲು ತನ್ನದೇ ಆದ ಕಳಪೆ ದಾಖಲೆಯನ್ನು ನೋಡುವುದು ಉತ್ತಮ ಎಂದು ಹೇಳಿದ್ದಾರೆ. ವಕ್ಫ್ ಮಸೂದೆ ಅಂಗೀಕಾರವಾದ ನಂತರ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕೇಂದ್ರದ ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಪಾಕಿಸ್ತಾನದಂತಹ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿಗಳೊಂದಿಗೆ ಹೋಲಿಸುವ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: S Jaishankar : “ಭದ್ರತಾ ಉಲ್ಲಂಘನೆಯನ್ನು ಖಂಡಿಸುತ್ತೇವೆ” ; ಸಚಿವರ ಮೇಲಿನ ದಾಳಿಯ ನಂತರ ವಿದೇಶಾಂಗ ಇಲಾಖೆಯಿಂದ ಪ್ರತಿಕ್ರಿಯೆ
ವಕ್ಫ್ (ತಿದ್ದುಪಡಿ) ಮಸೂದೆ, 2024 ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತವನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಮಹತ್ವದ ಸುಧಾರಣೆಯಾಗಿದೆ. ಇಸ್ಲಾಮಿಕ್ ಲೋಕೋಪಕಾರದ ಪ್ರಮುಖ ಅಂಶವಾಗಿ, ವಕ್ಫ್ ಸಾಮಾಜಿಕ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ತಿದ್ದುಪಡಿಯು ಕೇಂದ್ರೀಕೃತ ಡಿಜಿಟಲ್ ನೋಂದಣಿ, ಬಲವಾದ ಸರ್ಕಾರಿ ಮೇಲ್ವಿಚಾರಣೆ ಮತ್ತು ದುರುಪಯೋಗದ ವಿರುದ್ಧ ಕಠಿಣ ಕಾನೂನು ಸುರಕ್ಷತೆಗಳನ್ನು ಪರಿಚಯಿಸುತ್ತದೆ” ಎಂದು ಅವರು ಹೇಳಿದರು.