
Reason for Darshan’s Bail Cancel: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಜಾಮೀನು ಅವಧಿಯಲ್ಲಿ ದರ್ಶನ್ ಅವರು ತಪ್ಪುಗಳನ್ನು ಮಾಡಿದ್ದಾರೆ ಎಂಬ ಆರೋಪವಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ ನಂತರ ಜಾಮೀನು ಪಡೆದಿದ್ದ ನಟ ದರ್ಶನ್ಗೆ ಸಂಕಷ್ಟ ಎದುರಾಗಿದೆ. ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ದರ್ಶನ್ ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದೊದಗಿದೆ. ದರ್ಶನ್ ಜಾಮೀನು ರದ್ದಾಗಲು ಅವರು ಸ್ವಯಂಕೃತ ತಪ್ಪುಗಳೇ ಇದಕ್ಕೆ ಕಾರಣ. ದರ್ಶನ್ ಅವರು ಜಾಮೀನು ಪಡೆದ ಬಳಿಕ ಅದನ್ನು ದುರುಪಯೋಗ ಮಾಡಿಕೊಂಡ ಆರೋಪವನ್ನು ಸರ್ಕಾರಿ ಪರ ವಕೀಲರು ಮಾಡಿದ್ದಾರೆ. ಈ ಮೊದಲು ಅವರು ಬೆನ್ನುನೋವಿನ ನೆಪ ಹೇಳಿ ನ್ಯಾಯಾಲಯಕ್ಕೆ ಗೈರಾಗಿದ್ದರು. ಆದರೆ, ಮರುದಿನವೇ ಅವರು ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಜಾಮೀನು ಸಿಕ್ಕ ಬಳಿಕ ಪ್ರಕರಣದ ಪ್ರಮುಖ ಸಾಕ್ಷಿ ಚಿಕ್ಕಣ್ಣ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಇದು ಕೂಡ ದೊಡ್ಡ ತಪ್ಪುಗಳಲ್ಲಿ ಒಂದು. ಇದು ದರ್ಶನ್ಗೆ ಮುಳುವಾಗಿದೆ.
ಹೈಕೋರ್ಟ್ ಮಾಡಿದ ಕೆಲವು ತಪ್ಪುಗಳ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ಹೊರಹಾಕಿದೆ. ಕೊಲೆ ನಡೆದ ಸ್ಥಳದ ಮಣ್ಣು ಮತ್ತು ದರ್ಶನ್ ಪಾದರಕ್ಷೆಯ ಮಣ್ಣು ಹೊಂದಾಣಿಕೆಯಾಗಿದೆ. ಮೃತನ ಡಿಎನ್ಎ ಕಲೆಗಳು ಆರೋಪಿಗಳ ಬಟ್ಟೆ ಮೇಲೆ ಪತ್ತೆಯಾಗಿದೆ. ಹೈಕೋರ್ಟ್ ಜಾಮೀನು ತೀರ್ಪು ದಾಖಲೆಗಳಿಗೆ ವಿರುದ್ಧವಾಗಿದೆ.
ದರ್ಶನ್ ಪ್ರಭಾವಿ ವ್ಯಕ್ತಿ. ಅವರು ಪ್ರಭಾವ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಸಾಕಷ್ಟು ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳಿವೆ. ಇದನ್ನು ಸರ್ಕಾರಿ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಬಳ್ಳಾರಿ ಜೈಲು
ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಮೊದಲು ಬೆಂಗಳೂರು ಜೈಲಿನಲ್ಲಿದ್ದ ಅವರನ್ನು ನಂತರ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಬೆಂಗಳೂರಿನ ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ.





