
ಕಲಘಟಗಿ: ಸದ್ಯದ ದಿನಗಳಲ್ಲಿ ಪತ್ರಿಕೋದ್ಯಮ ಹಲವಾರು ಸ್ಥರಗಳಲ್ಲಿ ಬದಲಾವಣೆ ಪಡೆದುಕೊಂಡಿದೆ. ಹೊಸ ಹೊಸ ತಂತ್ರಜ್ಞಾನಗಳು ಮಾಧ್ಯಮರಂಗ ಪ್ರವೇಶಿಸುತ್ತಿರುವುದರಿಂದ ಸಾಂಪ್ರದಾಯಿಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ ಎಂದು ಧಾರವಾಡ ಕವಿವಿ ಪ್ರತಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಸಂಜಯ ಮಾಲಗಿತ್ತಿ ಅಭಿಪ್ರಾಯಪಟ್ಟರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಸಮೀಪದ ದಾಸ್ತಿಕೊಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಾಲ್ಮಲಾ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು. ಜನಾಭಿಪ್ರಾಯ ಬಿಂಬಿಸುವುದೇ ಪತ್ರಿಕೋದ್ಯಮದ ಮೂಲ ಉದ್ದೇಶವಾಗಿದೆ. ಪತ್ರಕರ್ತರು ಸತ್ಯವನ್ನು ಮರೆಮಾಚಿ ಸುದ್ದಿ ಮಾಡಿದರೆ ಸಾಮಾಜಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಪತ್ರಿಕೋದ್ಯಮ ಬಹಳ ಮಹತ್ವದ ಕ್ಷೇತ್ರ. ಸಮಾಜದ ಮೇಲೆ ನಿಜವಾಗಿಯೂ ಕಳಕಳಿ ಇರುವವರು ಪತ್ರಿಕೋದ್ಯಮ ಕ್ಷೇತ್ರಕ್ಕೆಬರಬೇಕಿದೆ ಎಂದು ಹೇಳಿದರು. ಖಡ್ಗಕ್ಕಿಂತ ಹರಿತವಾದ ಶಕ್ತಿ ಪೆನ್ನಿಗಿದೆ. ವಸ್ತುನಿಷ್ಠ, ಸತ್ಯದ ಪರವಾಗಿ ವರದಿ ಮಾಡಿದಾಗ ಆ ಪೆನ್ನಿಗೆ ಶಕ್ತಿ ಬರುತ್ತದೆ. ಪತ್ರಕರ್ತರು ವರದಿ ಮಾಡುವ ಧಾವಂತದಲ್ಲಿ ತಮ್ಮ ನಿಲುವು, ಅಭಿಪ್ರಾಯಗಳನ್ನು ಪ್ರತಿಪಾದನೆ ಮಾಡುವುದು ಕಂಡುಬರುತ್ತಿದೆ.

ಇದು ಆಗಬಾರದು. ಸತ್ಯವನ್ನು ಪರಾಮರ್ಶಿಸುವ ನಿಟ್ಟುನಲ್ಲಿ ವಸ್ತುನಿಷ್ಠತೆಯುಳ್ಳ ವರದಿ ಮಾಡಬೇಕಿದೆ ಎಂದು ಹೇಳಿದರು. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಜನರನ್ನು ಒಗ್ಗೂಡಿಸುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿತ್ತು. ಕರ್ನಾಟಕ ಏಕೀಕರಣ ಸಂದರ್ಭದಲ್ಲೂ ಕನ್ನಡ ಪತ್ರಿಕೆಗಳೂ ಕೂಡ ಸಾಕಷ್ಟು ಪ್ರಮುಖ ಪಾತ್ರ ವಹಿಸಿದ್ದವು ಎಂದು ಹೇಳಿದರು. ಮಾಜಿ ಎಂ.ಎಲ್.ಸಿ ನಾಗರಾಜ ಛಬ್ಬಿ ಮಾತನಾಡಿ, ಸರಕಾರ ಮತ್ತು ಜನರ ಮಧ್ಯದ ಕೊಂಡಿಯಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವ ಸಂಪ್ರದಾಯ ಕಡಿಮೆ ಆಗುತ್ತಿದೆ. ಸರಕಾರಗಳ ಹಳಿ ತಪ್ಪಿದಾಗ ಸರಿ ದಾರಿಗೆ ತರುವ ಕೆಲಸ ಮಾಡುತ್ತಿವೆ. ಉತ್ತರ ಕರ್ನಾಟಕದ ಸಂಪ್ರದಾಯ ಅತ್ಯಂತ ಶ್ರೇಷ್ಠವಾದದ್ದು. ಅದು ಪ್ರತಿಕೋದ್ಯಮದ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು ಮಾನವೀಯತೆ, ಕಲೆ-ಸಂಸ್ಖೃತಿ ಬೆಳೆಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.ಕಾನಿಪ ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಕೆಲಸದ ನಿರ್ವಹಣೆ, ಜನರ ನಂಬಿಕೆ-ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಪತ್ರಕರ್ತರು ಮಾಡಬೇಕಿದೆ. ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನಿಪ ಸಂಘ ಸಾಕಷ್ಟು ಶ್ರಮಿಸಿದೆ. ಕಲಘಟಗಿ ಕಾನಿಪ ಪ್ರತಿವರ್ಷ ಪತ್ರಿಕಾ ದಿನಾಚರಣೆ ವಿಶಿಷ್ಟವಾಗಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಎಸ್.ಆರ್. ಪಾಟೀಲ, ಕಾನಿಪ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರಚಾರ್ಯ ಕುಂದರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಕೃಷಿಕ ಸಮಾಜದ ಅಧ್ಯಕ್ಷ ಬಾಬು ಅಂಚಟಗೇರಿ, ನ್ಯಾಯವಾದಿ ಅಣ್ಣಪ್ಪ ಓಲೇಕಾರ, ಕಸಾಪ ಅಧ್ಯಕ್ಷ ರಮೇಶ ಸೋಲಾರಗೊಪ್ಪ ಪ್ರೊ.ಸಂಗಮ್ಮನವರ, ಪ್ರೊ.ಜಾಲಿಹಾಳ ಮಾತನಾಡಿದರು. ಕಾನಿಪ ತಾಲೂಕು ಅಧ್ಯಕ್ಷ ಪ್ರಕಾಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾನಿಪ ಸಂಘದ ರಾಜ್ಯಮಟ್ಟದ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ಈರಪ್ಪ ನಾಯ್ಕರ, ಧಾರವಾಡ ಕಾನಿಪ ಸಂಘದ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪುರಸ್ಕೃತ ಪ್ರಕಾಶ ಲಮಾಣಿ, ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿ ಪುರಸ್ಕೃತ ಪ್ರಹ್ಲಾದಗೌಡ ಗೊಲ್ಲಗೌಡರ ಹಾಗೂ ಪತ್ರಿಕಾ ವಿತರಕರು ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಈ ವೇಳೆ ಎಸ್.ವಿ. ತಡಸಮಠ, ಸೋಮಶೇಖರ ಬೆನ್ನೂರು, ದೇವಪ್ಪ ಮೋರೆ, ಸೋಮಲಿಂಗ ಒಡೆಯರ, ವೈ.ಎನ್.ಪಾಟೀಲ, ಮಂಜುನಾಥ ಮಾಳಗಿ , ಪ್ರಭಾಕರ ನಾಯಕ, ರವಿ ಬಡಿಗೇರ, ರಾಕೇಶ ಅಳಗವಾಡಿ, ಕಲ್ಲಪ್ಪ ಮಿರ್ಜಿ, ವಿರೇಶ ಹಾರೂಗೇರಿ, ಉದಯ ಗೌಡರ, ಪ್ರಕಾಶ ಧೂಪದ, ಶಶಿಕುಮಾರ ಕಟ್ಟಿಮನಿ, ಗಿರೀಶ ಮುಕ್ಕಲ್ಲ, ಉಮೇಶ ಜೋಶಿ, ವಿನಾಯಕ ಭಟ್ಟ, ಯಲ್ಲಪ್ಪ ಚವರಗಿ, ಬಸವರಾಜ ತಿಪ್ಪಣ್ಣವರ, ಉಳುವಪ್ಪ ಬಳಿಗೇರ, ಪ್ರಭು ರಂಗಾಪುರ,ಸಾತಪ್ಪ ಕುಂಕೂರು, ಶಂಕರಲಿಂಗ ಧಾಸನಕೊಪ್ಪ, ಪರಶುರಾಮ ಎತ್ತಿನಗುಡ್ಡ, ಹನಮಂತ ಕಾಳೆ, ಇತರರಿದ್ದರು.





