ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದ ಸರ್ಕಾರ ರಾಜ್ಯದಲ್ಲಿ ನಡೆದಿದೆ. ಇದರಿಂದ ಜನ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಣ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ತಮಾಷೆಗಾಗಿಯಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ದುಡ್ಡು ಇಲ್ಲಾ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಈಗ ತಮಾಷೆಗಾಗಿ ಹೇಳಿದ್ದೆ ಎಂದು ಹೇಳುತ್ತಿದ್ದಾರೆ. ತಮಾಷೆಗಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ದ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಶಾಸಕರಿಗೆ ಯಾವುದೇ ಅನುದಾನ ಇಲ್ಲ. ಕೆಲಸ ಮಾಡಲು ಆಗಿಲ್ಲ. ಹೀಗೆ ಆದರೆ, ಇನ್ನೆರಡೂವರೆ ವರ್ಷದಲ್ಲಿ ಜನರ ಬಳಿ ಹೋಗಲು ಆಗುವುದಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಕೆಲಸ ಮಾಡಲು ಪ್ರತಿಯೊಂದಕ್ಕೂ ಭ್ರಷ್ಟಾಚಾರ, ಎಸ್ಟಿಮೇಟ್ಗೂ ಭ್ರಷ್ಟಾಚಾರ, ವರ್ಕ್ ಆರ್ಡರ್ ತೆಗೆದುಕೊಳ್ಳಲು ಭ್ರಷ್ಟಾಚಾರ. ಕಾಂಗ್ರೆಸ್ನ ನೀತಿಯಿಂದಾಗಿ ಜನರು ತಮ್ಮ ದುಡಿಮೆಯ ಹಣವನ್ನು ಭ್ರಷ್ಟಾಚಾರಕ್ಕೆ ಕೊಡುವ ಪರಿಸ್ಥಿತಿ ಬಂದಿದೆ ಎಂದು ಅವರು ಆರೋಪಿಸಿದರು.
ಡಬಲ್ ಸ್ಟ್ಯಾಂಡರ್ಡ್
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ, ಅದನ್ನು ಅವರಿಗೆ ನೇರವಾಗಿಯೇ ಹೇಳಬಹುದಿತ್ತು. ಅವರ ಮಾತು ಸಿಎಂ ಕೇಳುತ್ತಿರಲಿಲ್ಲವೇ. ಪ್ರತಿಪಕ್ಷದವರ ರೀತಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಗಣಿ ಹರಾಜು ಹಾಕಲು ಕಾನೂನು ಮಾಡಿತ್ತು ಅದಕ್ಕೂ ಮೊದಲಿನ ದಿನ ರಾಜ್ಯ ಸರ್ಕಾರ ಗಣಿ ಹರಾಜು ಹಾಕಿದ್ದರು. ಈ ಹಿಂದೆ ನಮ್ಮ ಅಧಿಕಾರದಲ್ಲಿ ಜಿಂದಾಲ್ಗೆ ಜಮೀನು ನೀಡಬಾರದು ಎಂದು ಎಚ್. ಕೆ. ಪಾಟೀಲರು ಪತ್ರ ಬರೆದಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಜಿಂದಾಲ್ಗೆ ಜಮೀನು ನೀಡಿದರು. ಈ ರೀತಿಯ ಡಬಲ್ ಸ್ಟ್ಯಾಂಡರ್ಡ್ ಯಾಕೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ನಮ್ಮ ವಿರುದ್ದ ಮಾಡಿದ್ದ ಭ್ರಷ್ಟಾಚಾರದ ಆರೋಪ ರಾಜಕೀಯ ಪ್ರೇರಿತ ಆಗಿತ್ತು. ನಾನು ಆಗಲೇ ದಾಖಲೆ ಕೊಡುವಂತೆ ಹೇಳಿದ್ದೆ. ಯಾರೂ ದಾಖಲೆ ನೀಡಲಿಲ್ಲ. ಈಗ ಅದೇ ಗುತ್ತಿಗೆದಾರ ಸಂಘ ಈ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ ಎಂದು ದೂರಿದರು.
ಶಾಸಕ ಬಿ.ಆರ್. ಪಾಟೀಲ್ ಅವರು ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವುದು ಇದೇನು ಮೊದಲ ಸಲ ಅಲ್ಲ. ಈ ಹಿಂದೆ ಮೂರು ಬಾರಿ ಆರೋಪ ಮಾಡಿದ್ದರು. ಆಗ ಅವರನ್ನು ಸಮಾಧಾನ ಮಾಡಲು ಯೋಜನಾ ಆಯೊಗದ ಉಪಾಧ್ಯಕ್ಷನ್ನಾಗಿ ಮಾಡಿದ್ದರು. ಈಗ ಸಮಾಧಾನ ಮಾಡಲು ಸಂಪುಟ ಸ್ಥಾನ ಕೊಡಬಹುದು ಎಂದರು.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ
ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಾವೆಲ್ಲ ಸಭೆ ಸೇರಿ ಚರ್ಚೆ ಮಾಡಿ ಆಯಾ ಪ್ರದೇಶದ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Flood threat: ಪ್ರವಾಹ ಭೀತಿ; ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ
ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಅವರು ಹೋರಾಟಕ್ಕೆ ಬಂದಾಗ ಸ್ಪೂರ್ತಿ ಬರುತ್ತದೆ. ಅವರು ದೊಡ್ಡ ನಾಯಕರು. ಅವರು ಪ್ರವಾಸ ಮಾಡಿದಾಗಲೆಲ್ಲಾ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಈಗ ಸ್ವಯಂಪ್ರೇರಿತರಾಗಿ ಪಕ್ಷದ ಸಂಘಟನೆಗೆ ಬಂದಿದ್ದಾರೆ. ಅವರಿಂದ ಪಕ್ಷಕ್ಕೆ ಶಕ್ತಿ ಹೆಚ್ಚಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.