[ad_1]
ಬೆಂಗಳೂರು
ಬೆಂಗಳೂರಿಗೆ ಪ್ರತಿದಿನ ನೂರಾರು ರೈಲುಗಳು ಬಂದು, ಹೋಗುತ್ತವೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ, ನಗರದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ, ಬೆಂಗಳೂರು ಹೊರವಲಯದಲ್ಲಿ ಎರಡು ರೈಲ್ವೆ ಟರ್ಮಿನಲ್ಗಳನ್ನು ತೆರೆಯಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮಾದರಿಯಲ್ಲಿ ಎರಡು ಹೊಸ ರೈಲ್ವೆ ಟರ್ಮಿನಲ್ಗಳನ್ನು ನಿರ್ಮಾಣ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ, ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿಯಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ನಿರ್ಮಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ತಯಾರಿ ಆರಂಭವಾಗಿದೆ. 800 ಎಕರೆ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಸದ್ಯ ಅಧಿಕಾರಿಗಳಿಂದ ಜಾಗ ಗುರುತಿಸುವ ಕೆಲಸ ಆಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಜನ ದಟ್ಟಣೆ ತಪ್ಪಿಸುವಲ್ಲಿ ಈ ಟರ್ಮಿನಲ್ಗಳು ಸಹಕಾರಿಯಾಗಲಿವೆ ಎಂದರು.
ಈ ಬಗ್ಗೆ ಟ್ರಾಫಿಕ್ ತಜ್ಞರು ಮಾತನಾಡಿ, ಬೆಂಗಳೂರು ಹೊರವಲಯದಲ್ಲಿ ಎರಡು ಹೊಸ ರೈಲು ನಿಲ್ದಾಣ ನಿರ್ಮಾಣದಿಂದ ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ವಾಹನ ಸಂಚಾರ ಸುಗಮವಾಗಲಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಈ ಎರಡು ಹೊಸ ರೈಲ್ವೆ ಟರ್ಮಿನಲ್ನಿಂದ ನಗರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ (ದಂಡು) ರೈಲು ನಿಲ್ದಾಣ ಮತ್ತು ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಲ್ಲಿನ ಜನ ದಟ್ಟಣೆ ಕಡಿಮೆಯಾಗಲಿದೆ. ಮತ್ತು ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
[ad_2]
Source link